ಹಿರಿಯ ಭಾಗವತ ದಿನೇಶ ಅಮ್ಮಣ್ಣಾಯರವರಿಗೆ ಸೀತಾನದಿ ಪ್ರಶಸ್ತಿ
ಲೇಖಕರು : ಪ್ರೋ.ಎಸ್.ವಿ.ಉದಯ ಕುಮಾರ ಶೆಟ್ಟಿ
ಶನಿವಾರ, ಒಕ್ಟೋಬರ್ 11 , 2014
|
ಯಕ್ಷಗಾನ ರಂಗದ ಪ್ರಸಿದ್ದ ಪ್ರಸಂಗಕರ್ತ ತಾಳಮದ್ದಳೆ ಅರ್ಥದಾರಿ. ವಾಗ್ಮಿ, ಸಾಹಿತಿ ಆದರ್ಶ ಅದ್ಯಾಪಕನಾಗಿ ಖ್ಯಾತಿವೆತ್ತ ದಿ. ಸೀತಾನದಿ ಗಣಪಯ್ಯ ಶೆಟ್ಟರ 27ನೇ ವರ್ಷದ ಸಂಸ್ಮರಣೆ, ಪ್ರಶಸ್ತಿ ಪ್ರದಾನ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಅಕ್ಟೋಬರ್ 12 ಭಾನುವಾರದಂದು ಗಣ್ಯರ ಉಪಸ್ಥಿತಿಯಲ್ಲಿ ನೆರವೇರಲಿದೆ. ಈ ಸಾಲಿನ ಸೀತಾನದಿ ಪ್ರಶಸ್ತಿಗೆ ಬಾಜನರಾಗುವವರು ತೆಂಕುತಿಟ್ಟಿನ ಗಾನಕೋಗಿಲೆ ಬಿರುದಾಂಕಿತ ಪ್ರಸಿದ್ದ ಭಾಗವತರಾದ ದಿನೇಶ ಅಮ್ಮಣ್ಣಾಯರು.
ತೆಂಕುತಿಟ್ಟು ಯಕ್ಷಾಗಾನದ ಸಮಕಾಲೀನ ಅಗ್ರಪಂಕ್ತಿಯ ಭಾಗವತರಲ್ಲಿ ದಿನೇಶ ಅಮ್ಮಣ್ಣಾಯರು ಒಬ್ಬರು. ಆದುನಿಕ ಹಿಮ್ಮೇಳಪ್ರೀಯರಿಂದ ಗಾನಕೋಗಿಲೆ, ಮದುರ ಗಾನದ ಸಿರಿ, ಯಕ್ಷ ಸಂಗೀತ ಕೌಸ್ತುಭ ಮುಂತಾದ ಬಿರುದನ್ನು ಪಡೆದ ಇವರು ಬಹುಬೇಡಿಕೆಯ ಭಾಗವತರು. ಭಾಗವತಿಕೆಯ ಗಾನ ವೈವಿದ್ಯ ಕಾರ್ಯಕ್ರಮಕ್ಕೆ ಅನಿವಾರ್ಯ ಕಲಾವಿದರಾದ ಇವರು ಸಿದ್ದಿ ಮತ್ತು ಪ್ರಸಿದ್ದಿಯ ನೆಲೆಯಲ್ಲಿ ಗುರುತಿಸಲ್ಪಡುವ ಕಲಾವಿದರು.
ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಗ್ರಾಮದ ಅರಸಿನಮಕ್ಕಿ ಎಂಬಲ್ಲಿ ನಾರಾಯಣ ಅಮ್ಮಣ್ಣಾಯ ಮತ್ತು ಕಾವೇರಿ ಅಮ್ಮನವರ ಪುತ್ರನಾಗಿ 1959ರಲ್ಲಿ ಜನಿಸಿದ ಇವರು ಪ್ರೌಡ ಶಿಕ್ಷಣ ಮತ್ತು ವೈದೀಕ ವಿದ್ಯೆ ಕಲಿತು ತೆಂಕುತಿಟ್ಟಿನ ಬಯಲು ರಂಗಸ್ಥಳದಲ್ಲಿ ಸುಶಿಕ್ಷಿತ ಸುಸಂಸ್ಕ್ರತ ಭಾಗವತರಾಗಿ ಖ್ಯಾತರಾದರು. ಚಿಕ್ಕಪ್ಪ ವಿಷ್ಣು ಅಮ್ಮಣ್ಣಾಯ ಮತ್ತು ಹರಿ ನಾರಾಯಣ ಬೈಪಡಿತ್ತಾಯರಿಂದ ಯಕ್ಷಗಾನದ ಪ್ರಾಥಮಿಕ ಅಬ್ಯಾಸ ಮಾಡಿದ ಇವರು ತೆಂಕುತಿಟ್ಟಿನ ಮೇರು ಭಾಗವತರಾದ ದಾಮೋದರ ಮಂಡೆಚ್ಚರ ಶಿಷ್ಯರಾಗಿ ತಾಳ ಲಯ ಅಬ್ಯಾಸಮಾಡಿ ಕರ್ನಾಟಕ ಮೇಳದಲ್ಲಿ ಮಂಡೆಚ್ಚರೊಂದಿಗೆ ದೀರ್ಘಕಾಲ ಭಾಗವತರಾಗಿ ಸೇವೆಸಲ್ಲಿಸಿದರು. ತೆಂಕುತಿಟ್ಟಿನ ಭಾಗವತಿಕೆಯಲ್ಲಿ ಪ್ರಚಲಿತವಿದ್ದ ಅಗರಿ, ಕಡತೋಕ, ಪದ್ಯಾಣ, ಬಲಿಪ, ಶೈಲಿಯಂತೆ ಮಂಡೆಚ್ಚರ ಹಿಂದುಸ್ಥಾನಿ ಶೈಲಿಯ ಪ್ರಾತಿನಿಧಿಕ ಭಾಗವತರಾಗಿ ಇವರನ್ನು ಗುರುತಿಸಬಹುದು.
ವಿದ್ಯೆಗೆ ವಿನಯವೇ ಭೂಷಣವೆಂಬಂತೆ ಹ್ರದಯವಂತ ಸಜ್ಜನ ಸುಸಂಕ್ರ್ಕತ ಭಾಗವತನೆನಿಸಿ ಕರ್ನಾಟಕ ಯಕ್ಷಗಾನ ನಾಟಕಸಬಾ ಮಂಗಳೂರು, ಕುಂಡಾವು, ಪುತ್ತೂರು, ಕದ್ರಿ, ಮುಂತಾದ ಮೇಳಗಳಲ್ಲಿ ಸುದೀರ್ಘ ೪೦ ವರ್ಷ ಕಲಾಸೇವೆಮಾಡಿದ ಇವರು ಕಳೆದ ೧೦ ವರ್ಷದಿಂದ ಎಡನೀರು ಮೇಳದ ಪ್ರದಾನ ಭಾಗವತರಾಗಿ ಸೇವೆಸಲ್ಲಿಸುತಿದ್ದಾರೆ. ಕರ್ನಾಟಕ ಮೇಳದಲ್ಲಿ ಮೇರುಕಲಾವಿದರಾದ ಅಳಿಕೆ ರಾಮಯ್ಯ ರೈ, ಕೋಳ್ಯೂರು ರಾಮಚಂದ್ರ ರಾವ್, ಗುಂಪೆ ರಾಮಯ್ಯ ರೈ. ಬೋಳಾರ ನಾರಾಯಣ ಶೆಟ್ಟಿ, ಸಂಜಯ ಕುಮಾರ ಶೆಟ್ಟಿ, ಮಲ್ಪೆ ರಾಮದಾಸ ಸಾಮಗ, ಅರುವ ಕೊರಗಪ್ಪ ಶೆಟ್ಟಿ ಮುಂತಾದ ಕಲಾವಿದರನ್ನು ತನ್ನ ಜಾಗಟೆ ನಿನಾದದಿಂದ ಕುಣಿಸಿದ ಕೀರ್ತಿಗೆ ಪಾತ್ರರಾದ ಇವರು ಆ ಕಾಲದಲ್ಲಿ ಮೆರೆದ ಪೌರಾಣಿಕ ಪ್ರಸಂಗಗಳಾದ ಗಾಂದಾರಿ, ಸತ್ಯ ಹರಿಶ್ಚಂದ್ರ, ನಳದಮಯಂತಿ, ಕೋಟಿ ಚನ್ನಯ ಮುಂತಾದ ಪ್ರಸಂಗಗಳಲ್ಲಿ ತನ್ನ ಸುಮದುರ ಕಂಠದಿಂದ ಹಿಮ್ಮೇಳಕ್ಕೆ ಜೀವತುಂಬಿದ್ದಾರೆ.
ದ್ರೌಪದಿ ವಸ್ತ್ರಾಪಹರಣದ ಭಾಗವತರೆಂದೇ ಖ್ಯಾತರಾದ ಈ ಪ್ರಸಂಗದ “ಕರುಣದಿ ಕಾಯೋ ಗೋವಿಂದ” ಪದ್ಯ ಮತ್ತು ದ್ರೌಪದಿ-ಪ್ರಾತಿಗಾಮಿ ಸಂವಾದದ ಪದ್ಯಗಳು ಅಪಾರ ಕೇಳುಗರನ್ನು ರಂಜಿಸಿತ್ತು. ಹೊಸ ಪ್ರಸಂಗಗಳಲ್ಲಿ ತನ್ನ ಗುರುವಿಗೆ ಸಮರ್ಥ ಸಾಥ್ ನೀಡಿದ ಅಮ್ಮಣ್ಣಾಯರ ಸುಮದುರ ಕಂಠದಿಂದ ಮೂಡಿಬಂದ ಮಾನಿಷಾದ, ಕಾಡಮಲ್ಲಿಗೆ, ಸೊರ್ಕುದ ಸಿರಿಗಿಂಡೆ, ತುಳುನಾಡ ಸಿರಿ, ದಳವಾಯಿ ದುಗ್ಗಣ್ಣ, ಮಾಯಾ ಜುಮಾದಿ, ಅಮರಶಿಲ್ಪಿವೀರ ಶಂಭು ಕಲ್ಕುಡ, ಪಟ್ಟದ ಪದ್ಮಲೆ, ಮುಂತಾದ ನವೀನ ಪ್ರಸಂಗದ ಅವರ ಪದ್ಯಗಳು ಇಂದಿಗೂ ನಿತ್ಯನೂತನ. ಸೀತಾನದಿ ಗಣಪಯ್ಯ ಶೆಟ್ತಿ ವಿರಚಿತ ಜಾಲಕೊರತಿ ಪ್ರಸಂಗದ ಪದ್ಯಗಳನ್ನು ಅವರು ಪ್ರಸಂಗಪ್ರತಿ ಇಲ್ಲದೇ ಕಂಠಪಾಠವಾಗಿ ಇಂದಿಗೂ ಹಾಡಬಲ್ಲರು.
ವ್ರತ್ತಿ ಜೀವನದಲ್ಲಿ ಯಕ್ಷಗಾನ ಕಾರ್ಯಕ್ರಮಕ್ಕೆ ಒಪ್ಪಿಕೊಂಡನಂತರ ಅನಿವಾರ್ಯವಾಗಿಯೂ ಒಮ್ಮೆಯೂ ಗೈರು ಹಾಜರಾಗದ ಇವರಿಗೆ ನಾಡಿನಾದ್ಯಂತ ಮತ್ತು ವಿದೇಶದಲ್ಲೂ ಹಲವಾರು ಸನ್ಮಾನಗಳು ಸಂದಿವೆ. ಇದಕ್ಕೆ ನಿದರ್ಶನವಾಗಿ ಉಡುಪಿಯ ಅಮಿತ್ ಮೀಡಿಯಾ ವತಿಯಿಂದ ಕಳೆದ 25 ವರ್ಷದಿಂದ ನೆಡೆಸಿಕೊಂಡು ಬರುತ್ತಿರುವ ತಾಳಮದ್ದಳೆ ಕಾರ್ಯಕ್ರಮದಲ್ಲಿ ನಿರಂತರ 25 ವರ್ಷ ಅವರ ಬಾಗವಹಿಸುವಿಕೆಗಾಗಿ ತಾಳಮದ್ದಳೆಯ ರಜತೋತ್ಸವದಂದು ತಾಳ ಮದ್ದಳೆ ರೂವಾರಿ ಸುದಾಕರ ಆಚಾರ್ಯ ಇವರು ರೂ. 25000 ನಗದಿನೊಂದಿಗೆ ಸನ್ಮಾನಿಸಿದ್ದರು.
ಪಟ್ಲ ಸತೀಶ ಶೆಟ್ಟಿಯವರ ನೇತ್ರತ್ವದ ವಗೆನಾಡು ಯಕ್ಷೋತ್ಸವ ಸನ್ಮಾನ, ಉಡುಪಿ ಬೈಲೂರು ಮಹಿಷಮರ್ದಿನಿ ಯಕ್ಷಗಾನ ಮಂಡಳಿಯಿಂದ ಯಕ್ಷಪುರುಷೋತ್ತಮ ಬಿರುದಿನೊಂದಿಗೆ ಸನ್ಮಾನ ಸಹಿತ ಹಲವಾರು ಸನ್ಮಾನಗಳಿಗೆ ಬಾಜನರಾದ ಇವರಿಗೆ ಸೀತಾನದಿ ಗಣಪಯ್ಯ ಶೆಟ್ಟರ ಮೇರು ಯಕ್ಷಗಾನ ಕ್ರತಿಗಳಿಗೆ ಕರ್ನಾಟಕ ಮೇಳದಲ್ಲಿ ಕಂಠದಾನ ಮಾಡಿದ ಕೀರ್ತಿಗಾಗಿ ಸೀತಾನದಿ ಗಣಪಯ್ಯ ಶೆಟ್ಟಿ ಸಂಸ್ಮರಣಾ ಪ್ರಶಸ್ತಿ ಯೋಗ್ಯವಾಗಿಯೇ ಸಂದಿದೆ
|
|
|